Thursday, March 3, 2016

A new baby didn’t stop this inspirational woman from giving birth to another - ZenParent

A new baby didn’t stop this inspirational woman from giving birth to another - ZenParent

Thursday, November 15, 2012


ಧರ್ಮ ಮುಖ್ಯವೋ ಅಥವಾ ಜೀವವೋ?
ಮಾನವೀಯತೆ ಮರೆತರೆ ಅದೂ ಒಂದು ಮತವೇ..?
ಮೂಢನಂಬಿಕೆಯ ಕೊಂಪೆಯಲ್ಲವೇ..?
ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಮತ (ಧರ್ಮ) ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ.ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ.
ಅಹಿಂಸಾ ಪರಮೋ ಧರ್ಮ ಎಂಬ ನಿಲುವ
ು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ.
ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ?
ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ನಿಜಕ್ಕೂ ಕೊಲೆ ಎನಿಸುತ್ತದೆ.
ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದು ಜಗತ್ತಿನ ಅನ್ಯಾನ್ಯ ಸರಕಾರಗಳೂ ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿಯೂ ಹೌದಲ್ಲವೇ..?
http://www.youtube.com/watch?v=4EafNhbF8mg&feature=relmfu

Friday, May 6, 2011




ಕನ್ನಡಿ; ಎನಗೊಂದು ಅಚ್ಚರಿ.
~~~~~~~~~~~~~~~~~~~~

ಕನ್ನಡಿ;
ಏನಚ್ಚರಿ..!

ಕನ್ನಡಿ ಗಾಜಿನಿಂದಾಗಿದೆ...ನಿಜ.
ಆದರೆ
"ಗಾಜು"ಗಳೆಲ್ಲವೂ "ಕನ್ನಡಿ"ಗಳಲ್ಲವಲ್ಲ..!

ತನ್ನೊಳಗೆ ಖಾಲಿಯಾಗಿದ್ದೂ ,
ಇರುವುದ ಇರುವಂತೆ ಪ್ರತಿಫಲಿಸುವ
ನಮ್ಮ ಅರಿವಿಗೆ ತರುವ
"ಕನ್ನಡಿ" ಸತ್ಯ !
"ಪಾರದರ್ಶಕ ಗಾಜು" ಮಿಥ್ಯವೇ ?

ಮುಟ್ಟಲಾರದ,ತಲುಪಿ,ತಟ್ಟಲಾರದ
"ಪಾರದರ್ಶಕ ಗಾಜು"
ಕೇವಲ ದರ್ಶಕ !

ಆಹಾ...
ಒಳಗಿನ ಎಲ್ಲವನ್ನೂ ಕಂಡ ದಾರ್ಶನಿಕನಿಗೂ
ಅವನ ನಿಲುವಿನ
ದರ್ಶನಕ್ಕೆ.."ದರ್ಪಣ" ವೇ ಗತಿ !

ಅರೆ ! ಏನಚ್ಚರಿ !
ದಿಕ್ಕುಗಳ ಎಡ,ಬಲ
ಅದಲು ಬದಲಾಗಿ ತೋರಿಸಿದರೂ
ಆಕಾರ ವಿಕಾರಗಳು
ಅನುಭವಕ್ಕೆ ಸಲ್ಲುವುದು,
ನಮ್ಮೆದುರು ಬಂದ"ಪಾರದರ್ಶಕ ಗಾಜು"
ಬೆನ್ನಿಗೊಂದು "ಪರೆ" ಹಚ್ಚಿಸಿಕೊಂಡು
ಅಪಾರ...ದರ್ಶಕವಾಗಿ ಆಗಿ..
ಬದಲಾಗಿ
"ದರ್ಪಣ"ವಾದಾಗ !
ಅರೆ!
ಎಷ್ಟು ಸೊಗಸಾಗಿದೆ.
***********************

Saturday, December 11, 2010



ಅಭಿನಯ ಚತುರ.
--------------
ಹೊನ್ನಿನದ್ದದಾದರೆ
ಶೂಲವೋ,ತ್ರಿಶೂಲವೋ
ಯಾವುದಕ್ಕೂ ಸೈ..

ಬಂಗಾರದ್ದಾದರೆ
ಸರಪಳಿಯೊ,ಕೈಕೋಳವೋ
ಒತ್ತಾಯಕ್ಕೆ ಬೇಕಾದರೆ
ಎರಡೂ ಇರಲಿ...

ಪತ್ರಿಕೆ,ಬಾನುಲಿ
ಟಿವಿಯ ಕವರೇಜ್
ಸರಿಯಾಗಿದ್ದರೆ,
ಪ್ರವಚನ,ಸಂದರ್ಶನ
ಲೊಕೋದ್ಧಾರವೇ ನಮ್ಮ ಗುರಿ..

ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..

ಮೋಹದ ಹೆಂಡತಿ
ಮನೆಯೊಳಗಿರಲು,
ಕಾವಿಯ ಬಣ್ಣ ಹೇಗಿದ್ದರೇನು..?
ಅಭಿನಯ ಚತುರನ
ದರ್ಭಾರಿನಲ್ಲಿ
ಪರಾಕ್..ಭೋ..ಪರಾಕ್!!
----------------

Sunday, October 24, 2010



ರೂಪಾಂತರ
-----------

ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.

ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.

ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.

ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..

ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.

ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------

Friday, October 15, 2010




ಆರು ಚಕ್ರದ ಅಂದದರಮನೆ.
-----------------------
ಮತ್ತೆ ಕರೆಯಬೇಡ ಕಣೆ,ನೀನು ಕಾಮಿನಿ,
ಕಾಮನ ಅರಗಿಣಿ,
ಕಡೆಗಣ್ಣನೋಟದಲಿ ಕೆಣಕಿ, ನನ್ನಲ್ಲಿ
ಆರುತ್ತಿರುವ ಕಿಚ್ಚನ್ನು ಕೆದಕ ಬೇಡವೇ..

ನನ್ನೆದುರಿನ ಚಿನ್ನದ ಚಿಗರೆಯಾಗಿ
ಆಸೆಯ ಉರಿಗೆ ತಿದಿಯೂದಿ
ಭಾವ ಬದಲಾಗಿ,ಕ್ರೋಧ ಹುಟ್ಟಿ
ಕೋಪದ ಕೈಗೊಂಬೆಯಾಗಿಸ ಬೇಡ ಕಣೇ..

ನಿನ್ನಪಡೆಯುವ ಹರ ಸಾಹಸದ
ವೆಚ್ಚಕ್ಕೆ ಹೊನ್ನ ಕೂಡಿಡುವ
ಲೋಭಿಯಾಗಿಸಬೇಡವೇ...ಚಿನ್ನಾ..

ಮೋಹದ ಮಾಯಾ ಮುಸುಕನ್ನು ಮುಚ್ಚಿ,
ಮರೆಸುತ್ತ ಲೋಕದ ರೀತಿನೀತಿಯ
ಚೌಕಟ್ಟಿನಿಂದಾಚೆಗೆ ಸೆಳೆಯಬೇಡವೇ..
ಮೋಹನಾಂಗೀ..

ಆಮೋದ ಪ್ರಮೋದದ
ಹಳೆನೆನಪನುದ್ದೀಪಿಸಿ,
ಮದ ತುಂಬಿ,ಉನ್ಮತ್ತನನ್ನಾಗಿಸ ಬೇಡ
ಕಣೇ..ಮದಗಜಗಾಮಿನಿ.

ನಿನ್ನೆಗಳ ಮರೆಯುವ ಪ್ರಯತ್ನಕ್ಕೆ
ಮಾತ್ಸರ್ಯದ ಸವತಿಯಾಗಿ ಕಾಡಬೇಡವೇ..
ಕನಸಿನ ಕನಕಾಂಗಿ..
ಕಾಡಿ ನೂಕದಿರು ಮತ್ತೊಮ್ಮೆ ನನ್ನ
ಜೀವನದ ಜೋಕಾಲಿಗೆ...
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ...
------------------------

Thursday, August 19, 2010

ಚಿಂತೆ
-----


ಯಾರಿಗೆ ಬೇಡ ಹೇಳಿ?

ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .

ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

ಚಿಂತೆ ಯಾರಿಗೆ ಬೇಡ?

ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,

ಚಿಂತೆ ಯಾಕೆ ಬೇಡ ಹೇಳಿ ?

ಚಿಂತೆ ಯಾಕೆ ಮಾಡತಿಯಾ ?................
ಕೇಳೋದು ಸುಲಬ!

ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !
----------
ನೀವೆಲ್ಲ
ಮತ್ತೆ ಇದನ್ನೊಮ್ಮೆ ಓದಿದರೆ ಚೆನ್ನಾಗಿತ್ತು ಅನಿಸ್ತು.ಅದಕ್ಕೇ ಪೋಸ್ಟ್ ಮಾಡಿದೆ.

Thursday, August 5, 2010



ಪಾರವಿಲ್ಲದ ಪ್ರೀತಿ..
=========

ನೋಡಿಲ್ಲ ಇದುವರೆಗೆ ನಿನ್ನ
ಆದರೂ ನಿನ್ನ ಮೇಲೆ
ಅದೇಕೋ
ಅಪಾರ ಪ್ರೀತಿ.
(ನೊಡಿಲ್ಲದ ಕಾರಣದಿಂದ
ಅಂತೂ ಖಂಡಿತ ಅಲ್ಲ!)

ನಿನ್ನನರಿತವರಂತೆ
ಅವರು..
ಇವರು ಅಂದ ಮಾತಿಗೆ
ಬೆಲೆಕೊಟ್ಟು,
ಬೆಲೆಕಟ್ಟಲಾಗದ
ಅವರ ಸಂಗದಲ್ಲಿ
ನಿನ್ನ ಕಾಣುವ ನನ್ನ ಪ್ರಯತ್ನ..
ಹುಸಿಹೋಗಲಿಲ್ಲ.

ನಿನ್ನ ಅಂದ ಚಂದ,
ಗುಣಗಳ ವರ್ಣನೆ ಕೇಳುತ್ತ,ಕೇಳುತ್ತ..
ನಿನ್ನ ಪ್ರೀತಿಯ ಆಳದಲಿ
ಮೀಸಿಬಂದ ಅವರ ತನುಗಂಧ
ಆಘ್ರಾಣಿಸುತ್ತ...ಇದ್ದಂತೆ,
ಪಾರವಿಲ್ಲದ ನಿನ್ನೋಳಗೆ
ಒಂದಾಗುವ..
ತೀರದ ಬಯಕೆ.

ನಿನ್ನಲ್ಲಿ ಒಂದಾಗಿ,
ನನ್ನೊಳಗೆ ನೀನಾಗಿ
ನೀನೇನಾನಾಗಿ
ನಾನಿಲ್ಲದಾಗುವ ಬಯಕೆ..

ಇದು ಹುಚ್ಚಲ್ಲ.
ಎದೆಯೊಳಗೆ ಹುಟ್ಟಿ,
ನಖ ಶಿಖಾಂತ ಹಬ್ಬಿ,
ಈಗ
ನೆತ್ತಿ ಸೀಳಿ
ಜ್ವಲಿಸುವ ಕಿಚ್ಚು.

ಅರೆ! ಇದೇನು ಬಿಂಬವೇ?
ಅಲ್ಲ,
ನಾನೇ ನಿನ್ನ
ಪ್ರತಿಬಿಂಬವೇ??
ಹೇಗೋ......
ನಾನೇ ನಿನ್ನೊಳಗೋ
ನೀನೇ ನನ್ನೊಳಗೋ

ಒಟ್ಟಿನಲ್ಲಿ ಎಂದಿಗೂ..
ಹಾಗೇ ಇರಲಿ
ನಿನ್ನಲ್ಲಿದ್ದ
ಪಾರವಿಲ್ಲದ ಪ್ರೀತಿ,
----------------

Sunday, July 25, 2010



ಮರೆವೆನೆ ಜೊತೆಯ?
--------------
ಕತ್ತಲ ಕಳೆಯಲು
ತಿಂಗಳ ಚಂದಿರ
ತಿಣುಕಾಡುವ
ಪರಿಯನು ಕಾಣುತ,

ಚುಕ್ಕಿಗಳಂದವು
ಬಾಂದಳದಣ್ಣ..
ನಾವಿರುವೆವು ಜೊತೆಗೆ.

ಜೊತೆಯಿದ್ದರೆ ಕೆಲಸವು ಹಗುರ
ಮನಸು ನಿರಾಳ.

ನಿಶಾದೇವಿಯ ಅಪ್ಪುತ,ತಬ್ಬುತ
ನಿದ್ದೆಗೆ ದೂಡುತ
ಚಂದಿರ ತಂದ
ಬೆಳದಿಂಗಳ ಚಂದ...

ಚುಕ್ಕಿಯ ಚಿಣ್ಣಗೆ
ಕಣ್ಣನು ಮಿಣುಕಿಸಿ
ಚೆಲ್ಲುತ ಬೆಳಕನು
ಚಂದಿರ ಅಂದ...

ಪ್ರೀತಿಯ ನೀಡಿ..ಜೋಡಿಸಿ ಕೈಯನು
ಜೊತೆಯಲಿ ನಿಂದಾ
ನಿಮ್ಮನು ಮೆರೆಸುವೆ ಆಗಸದೆತ್ತರ..
ಮರೆವೆನುಎಂತೂ..
ಮರೆಯೆನು ಎಂದೂ..

ಮರೆಯದೆ ಜತೆಯ
ಮೆರೆಯುವ ನಭದಿ
ಜೊತೆಯಲಿ ನಿಂದು
ಎಂದೆಂದೂ...
++++++

Thursday, July 15, 2010

Gregory Patrao :: Homestead Demolition

Sunday, July 4, 2010



ಯಾರ ಕೃಪೆಯ,
ಯಾವಕಾಲದ ಮಹಲೋ?
--------------

ಸಾವಿರದ ಸಮಸ್ಯೆಗಳಿಗೆ,
ಪರಿಹಾರ
ಎಲ್ಲರಿಗೂ....ಎಲ್ಲ ಕಾಲಕ್ಕೂ ಎಲ್ಲೆಡೆಯೂ,
(ಕಾಲ ದೇಶಾತೀತವಾಗಿ)
ದೊರಕಿದ್ದರೆ....
ಇಲ್ಲೇ ಅಲ್ಲವೇ?

ಕಾಲ! ಅಹಾ,
ಅದೆಂತಹ ಕಲ್ಪನೆ!
ಪ್ರಕೃತಿಯೊಂದಿಗಿನ ಸಹಬಾಳ್ವೆಗಾಗಿ
ಹಗಲು ರಾತ್ರಿಯ ಚಕ್ರಕ್ಕೆ
ಎಣಿಕೆ ಬರೆಯುವ ಹುಚ್ಚಿನಲ್ಲಿ
ಕಟ್ಟಿಕೊಂಡ ಸುಂದರ ಮಹಲು!

ಇಲ್ಲಿ ಪಹರಿಗಳಿಲ್ಲ, ಒಡೆಯರೂ ಇಲ್ಲ.
ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ
ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ!

ಇಲ್ಲಿ ಬೀಸುವ ಗಾಳಿಗೆ,
ಬೆಳದಿಂಗಳಿನ ಸುಖ ನಿದ್ದೆಗೆ,
ಎಲ್ಲ ಮರೆಯುವ ಮರೆಸುವ
ಅದೆಂತಹ ಶಕ್ತಿ!

ಸಮಯದ ನಾಡಿ ಹಿಡಿದು
ಹೊತ್ತು ಹೊತ್ತಿಗೆ,
ಬೇಕಾದ ಎಲ್ಲವ...
ಬೇರಾರಿಗೂ ಇಲ್ಲವೆನ್ನುವಷ್ಟು ನೀಡಿ,
ನೋವ ನೀವುತ್ತ ಮನವ ಮುದಗೊಳಿಸಿ..ಮುದ್ದಿಸಿ,
ಶಕ್ತಿತುಂಬುವ
ಅದ್ಭುತ ಮಹಲು!

ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!

ಇಷ್ಟು ನಿಶ್ಚಿಂತೆಯ
ಮನೆಯ ಮಡಿಲು ದೊರಕಿದ್ದು
ಯಾರ ಕೃಪೆಯೋ??
---------------

Wednesday, May 5, 2010





ಬಂಧಿ...
-------------------

ಅದೇಕೊ ಏನೋ
ಇಂದು ಬೆಳಿಗ್ಗೆ
ಅಯಾಚಿತವಾಗಿ,
ಅನಿರೀಕ್ಷಿತವಾಗಿ,
ಬೀಸಿಬಂದ ಗಾಳಿಯ ರಭಸಕ್ಕೆ,
ಶತಮಾನಗಳೆಷ್ಟೊ ತುಂಬಿದ
ನನ್ನ....ಪಂಜರ..
ಚೂರು ಚೂರಾಯಿತು.

ಬಟ್ಟ ಬಯಲಲ್ಲಿ ಬಿದ್ದೂ,
ಅದು ಹೇಗೋ ಸುಧಾರಿಸಿಕೊಂಡು
ಚಾಚಿದ ಮಾಡಿನ ತೊಲೆಯನ್ನಧರಿಸಿ,ಏರಿ
ಅಲ್ಲಿಯೇ
ಕುಳಿತಿದ್ದೇನೆ.

ಪಂಜರದಲ್ಲಿ ,ಹಸಿಬಟಾಣಿ
ಚಪ್ಪರಿಸಿ ತಿನ್ನುತ್ತಾ ಇರುವಾಗ,
ಅನಿಸುತ್ತಿತ್ತು..
ಎಂದಿಗೋ..
ಹೊರಗೆ..ಹಾರಿ..
ಮುಗಿಲನೇರಿ ಆಚೆ ಲೋಕದಾಚೆ
ಅನಂತದೆಡೆಗೆ ಗಮನ.......

ಆದರೆ,
ನಾನಿನ್ನೂ ಕುಳಿತಿರುವೆ ಯಾಕಿಲ್ಲಿ?
ಮರೆತೆ.....ಯಾಕೆ ಹುಟ್ಟುಗುಣ?
ಶತಮಾನದ ಪಂಜರದ ಅಮಲೋ?
ಹಸಿ ಬಟಾಣಿಯ ಮೋಹಕ ರುಚಿಯೋ?

ಅನಾಯಾಸವಾಗಿ ದೊರಕಿದ್ದು ಮೆದ್ದು,
ಸಹಕರಿಸುತ್ತಿಲ್ಲ ದೇಹ.

ಬಹುಶ:
ಕಳಚಿದರೆ ಮಾತ್ರ
ದೇಹ..
ಪಂಜರ ಕಳಚಿಕೊಂಡದ್ದು
ಅರಿವಾಗಿ
ರೆಕ್ಕೆ ಬಿಚ್ಚಿಕೊಂಡೀತೇನೋ...
ದಿಗಂತ..ಗಮನ
ಅನಂತಯಾನ ಲಭ್ಯವೇನೋ?
---------------------------
(ಚಿತ್ರ..ಅಂತರ್ಜಾಲ)

Wednesday, April 14, 2010


ಯಾವ ಮಾನ ಯಾರಿಗೋ?
------------------------

ಉರುಳುವ ಕಾಲಕ್ಕೆ
ವರುಷವೇನು? ನಿಮಿಷವೇನು?
ನಮಗೊಂದು ಲೆಕ್ಕಕ್ಕೆ ಲೆಕ್ಕ
ಸಂವತ್ಸರಕ್ಕೆ ,ವಾರಕ್ಕೆ
ತಿಥಿ,ಘಳಿಗೆ,ನಕ್ಷತ್ರ, ಜನಗಳಿಗೆ..

ತಿಂಗಳಿಗೊಂದು ಮಾನ
ಸೂರ್ಯಂಗೊಂದು ಮಾನ
ಸೂರ್ಯನ ಪಕ್ಷ!
ಚಂದ್ರನ ಪರ!!
ಯಾವ ಮಾನ ಯಾರಿಗೋ?

ಉರುಳುವ ಕಾಲಕ್ಕೆ...
ನರಳುವ ಮನುಜಗೆ
ವರುಷವೇನು? ನಿಮಿಷವೇನು??

ಸೌರಮಾನದಲ್ಲಿ
ಯುಗಾದಿ...
ಮೇಷದಲ್ಲಿ ವೇಷತೊಡುವ
ವಿಷುವಿನ
ಕಣಿಯೇ ಸಂಕ್ರಾಂತಿ..

ಪಂಚಭೂತಗಳ ನೆನಪಿಸುವ
ಪಂಚಲೊಹದ ಉರುಳಿ...
ತುಂಬಿಕೊಂಡ ನವಫಲಗಳ
ಕಂಡರೆ
"ವಿಷು ಕಣಿ"
ಶುಭವಂತೆ ವರುಷ ಪೂರ್ತಿ..

ಉರುಳುವ ಕಾಲ ಚಕ್ರದಲ್ಲಿ
ಆದಿಯೆಲ್ಲೋ? ಅಂತ್ಯವೆಲ್ಲೊ??.
ವೃತ್ತಕ್ಕೆ ಮೊದಲೇನು?ಕೊನೆಯೇನು??
ಸುಮ್ಮನೇ ಇರಲಾರದ
ನಮಗೊಂದು
ಲೆಕ್ಕ..
ಸೌರಮಾನ..ಚಾಂದ್ರಮಾನ..
ವಿಷು..ಯುಗಾದಿ.."ಕಣಿ"..ಪಂಚಾಂಗ ಶ್ರವಣ...
ಎಳೆ ಗೇರುಬೀಜದ ಪಾಯಸ...ಪಲ್ಯ!!

ಉರುಳವ ಕಾಲಕ್ಕೆ
ವರುಷವೇನು? ನಿಮಿಷವೇನು?
ಲೆಕ್ಕಕ್ಕೆ......... ಲೆಕ್ಕ
ಸಂವತ್ಸರಕ್ಕೆ ,ವಾರಕ್ಕೆ
ತಿಥಿ,ಘಳಿಗೆ,ನಕ್ಷತ್ರ, ಜನಗಳಿಗೆ..
-----------------------

Friday, March 26, 2010

ಹೇಳು ಮುದ್ದೂ...
---------

ಮನಸು ನನ್ನ
ಮುದ್ದಿನಕೂಸು...
ಗಮನ ತಪ್ಪಿದರೆ,ಅರೆಕ್ಷಣ
ಅತ್ತು ಅರಚಿ ರಂಪಾಟ..

ತೊದಲುತ್ತ,
ತೆವಳುತ್ತ ಬಂದು
ತೆಕ್ಕೆ ಬಿದ್ದು...
ಮೊಹಕ ನಗೆ ಬೀರಿ..
ಮೋಹದ "ಬಿರಿ" ಬಿಗಿದು..
ನಾನೋ ಅದರ ಕೈಯ ಆಟದಗೊಂಬೆ!!

ನಮ್ಮ ಕೂಸಲ್ಲವೇ?
"ಕೂಸು ಮರಿ" ಮಾಡಿ..
ಬೆನ್ನಲ್ಲಿ ಹೇರಿ..ತಲೆಯಲ್ಲಿ ಹೊತ್ತು..
ಆಟವಾಡದೆ ಇರಲಿ ಹೇಗೆ ನೀವೇ ಹೇಳಿ??

ಮಗು ಇನ್ನೂ ಚಿಕ್ಕದು..
ಮಕ್ಕಳಾಟವು ಚೆಂದ..ಮಗುವಿನ ನಡೆ ಇನ್ನೂ ಅಂದ
ತಿನ್ನಿಸಲು, ತಿರು ತಿರುಗಿ..
ಅದೋ ನೋಡು..ಬಾನಗೂಡು..ಹಾರುತಿದೆ ವಿಮಾನವು..
ಚಂದಮಾಮ ಚಕ್ಕುಲಿ ಮಾಮ..ಬಾ..ಬಾ..ಬಾ..
ಕಾಗೆಯೊಂದು ಹಾರಿಬಂದು..
ಕಾಗಣ್ಣಾ..ಗುಬ್ಬಕ್ಕಾ..ಬನ್ನಿ..ಬನ್ನಿ..
ಊಟವೇ ಮಾಡಿಲ್ಲ..ಮಗು ಬೇಕಾದ್ದು ತಿಂದಿಲ್ಲ..
ಎದೆ ಹಾಲೂ ಬತ್ತಿದೆಯಲ್ಲ !

ಹೀಗಾದರೆ ಹೇಗೆ ಮಗುವೇ?
ನೀನೆಂದು ಬೆಳೆವೆ.. ಹೇಳು?
ನನಗೆ ಊರುಗೊಲಾಗಿ
ಊರೆಲ್ಲ ಸುತ್ತಿಸಿ ನನ್ನ ಆಧಾರವಾಗಿ
ನೀನೆಂದು ಬರುವೆ ಹೇಳು?

ಮನಸು ನನ್ನ
ಮುದ್ದಿನ ಕೂಸು
ಅತ್ತರೂ ಚೆಂದ ನಕ್ಕರೂ ಚೆಂದ
"ಹೆತ್ತವರಿಗೆ ಹೇಗಿದ್ದರೂ ಚೆಂದ"

ಮನಸೇ ಓ ನನ್ನ
ಮುದ್ದಿನ ಕೂಸೇ..
ನಿಜಕ್ಕಾದರೂ..
ಆಟವಾಡಿಸುತ್ತಿರುವುದು
ನಾನು ನಿನ್ನನ್ನೇ??
ಅಲ್ಲ ನೀನು ನನ್ನನ್ನೇ??
ಹೇಳು ಮುದ್ದೂ...
-----------------

Monday, March 15, 2010



ಯುಗಾದಿ ಯ
ಹೊಸಗಾದಿ
ತರಲೆಲ್ಲರ ಬಾಳಿಗೆ
ಹರುಷ,
ಸಂಭ್ರಮ.
ನೆನಸಾಗಲಿ
ಸವಿ ಕನಸುಗಳು.
ವಿಕೃತಿ
ಸಂವತ್ಸರದ ಹೆಸರಾಗುಳಿದು
ಸಂಸ್ಕೃತಿ
ನಮ್ಮೆಲ್ಲರ
ಉಸಿರಾಗಲಿ.
ಪ್ರೀತಿಯೆ
ಲೋಕದ
ಕಣ್ಣಾಗಲಿ.
ಜೀವನ ಹಣ್ಣಾಗಲಿ.
-----------------


Tuesday, March 9, 2010

ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!
------------------------

ಕೈತಗ್ಗಿಸಿ ನಡುಬಗ್ಗಿಸಿ
ಪಡೆಯಲೆಂದು...
ಪಡೆಯಲಿಲ್ಲ "ವಿದ್ಯೆ".
"ಅವಿದ್ಯೆ"ಯ ಕೈಚಾಚಿ ತಳ್ಳಿ...
ಪಡೆಯ ಬಯಸಿದ್ದು
ಕೈತುಂಬ ನೀಡಬಲ್ಲ "ವಿದ್ಯೆ".

ತುಂಬ....ತುಂಬಿಕೊಳ್ಳಬೇಕೆ೦ದು
ಹಿಡಿದು ಹೊರಟೆ ದೊಡ್ಡ ಕೊಡ,
ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?

ಅಬ್ಬ! ನೆನೆದರೆ
ಅದೆಷ್ಟು ಕಷ್ಟ..ಅಲ್ಲ,
"ಅಸೀಧಾರಾ ವೃತ".
"ಪಾಲಿಸಿದವಗೆ ಪಾವತಿಯಿಲ್ಲ"ವೆಂಬುದು
ಮಾತ್ರ ಇಲ್ಲಿ ಇಲ್ಲವೇ ಇಲ್ಲ.

ವಿಸ್ತಾರದ ತಿಳಿವಾದಾಗ..
ಈ ವಿದ್ಯಾಸಾಗರದ ಆಳಕ್ಕಿಳಿದೆ.
ಆಳಾಗುವುದು ತಪ್ಪಲಿ ಎಂದು.
ಸಾಗರದ ಅಲೆಗಳಡಿಯಲಿ
ನುತಿಸುತ ಮಿಂದು
ಬೆಳಕ ಕಂಡು ಬೆರಗುಗೊಂಡೆ!

"ಭವ..ಸಾಗರ"ವ ದಾಟಿ ಕೇವಲ
"ಭವಿ"ಯಾಗದೆ-ಅನುಭಾವಿ
ಆದವರೆ "ಗುರು"ವಾಗಿ ಒದಗಿ,
ಒಡೆದದ್ದಲ್ಲವೇ ಅವಿದ್ಯೆ?

ಅಚ್ಚರಿ!!!

ವಿನಯದಿಂದ "ವಿದ್ಯೆ"ಗಾಗಿ
ಬೆಳ್ಳಂಬೆಳಗ್ಗೆ ಬೇಗನೆ ಎಚ್ಚರಗೊಂಡದ್ದು..
ಮಾತ್ರ..ನೆನಪಿದೆ,
ತಗ್ಗಿ ಬಗ್ಗಿ ನವೆದು ನಡೆದು
"ಮೂರು ಬೆಳೆ"
ಪಡೆದದ್ದು..ಅರಿವಾಗಲೇ ಇಲ್ಲ.

ಅರೆ!
"ಅರಿವು" ಅರಿಯದೆ ಉಳಿದು..
ನಮಗೆ ನಾವೇ ಅರಿ ಯಾಗುವುದೇಕೆಂದು
ಅನ್ನ ರುಚಿಗಳ ಮರೆತು
ಗುರುವಿನಡಿಯಲಿ ಕುಳಿತು
ಗಳಿಸಿಕೊಂಡೆ "ವಿದ್ಯೆ".

...ಪಡೆದ ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!!
--------------------------------------

Friday, March 5, 2010

ಪಯಣದ ಸುಖ!!

ನಿನ್ನಿಷ್ಟ ಏನಿದ್ದರೂ
ಸಾವು ಘಟಿಸುವ ತನಕ
ಬದುಕಲೇ ಬೇಕು
ಒದಗಿಬಂದದ್ದು
ಅನುಭವಿಸಲೇ ಬೇಕು.

ಹುಟ್ಟಿದ ಬಳಿಕ ಸಾವೇ
ಪಯಣದ ಕೊನೆ.
(ಇಚ್ಚಾಮರಣಿಗೂ ಕೊನೆಗೆ
ದೊರಕಿದ್ದು ಮರಣವೇ ತಾನೇ?)
ಅರಿವಾದರಿಷ್ಟು,...
ಇನ್ನು
ಆತಂಕಯಾಕೆ?

ಅತ್ತುಕರೆವ ಗೊಣಗಾಟ
ಚಿಂತೆಯ ಚಿತೆಯ ನರಳಾಟ
ಅಟ್ಟಿಬಿಡು ಆಚೆ.

ನಿನ್ನೊಳಗೇ ಇದೆಯಲ್ಲ,
"ಆನಂದದ ಅಮೃತಕಲಶ"
ಹೀರುತ್ತ ಖುಷಿಯ,
ಅನುಭವಿಸು ಪಯಣದ ಸುಖವ!
-------------------------


Saturday, February 27, 2010









...ಚರ!!

ಯಾವುದೂ,ಹೇಗೂ
ಸ್ಥಿರವಿರದ
ನನ್ನ ನಿನ್ನ ಜಗತ್ತಲ್ಲಿ
ಚಲಿಸದಂತೆ ಮನವ
ಮೊಡಿಮಾಡಿ
ಸ್ಥಿರವಾಗಿಸುವ ಪ್ರಯತ್ನ!!
ಅದ್ಯಾವ ಪುಣ್ಯಾತ್ಮ
ತುಂಬಿದನೊ ನಿನ್ನ ತಲೆಯಲ್ಲಿ?

ರಾತ್ರಿಯೂ ಹಗಲೂ
ನೀನೇ ಹೇಳಿಕೊಳ್ಳುವಂತೆ
ಮನಸಿನಒಳಗೂ (ಆಶ್ಚರ್ಯ)
ಹೊರಗೂ "ಅದೇ ಧ್ಯಾನ ವಂತೆ"
ಹೊಸಬಗೆಯ"ರೊಗವಂತೆ"..
ಹೇಗಾಯಿತು?ಹೀಗೇಕಾಯಿತು?

ಅಂತ ನನ್ನ ಕೇಳಿದರೆ
ಏನು ಹೇಳಲಿ ಗೆಳೆಯ?
ನನಗೊ
ಈ ರೋಗ ಹಿಡಿದು
ವರುಷವಾಯಿತು,ಇಪ್ಪತೈದು
ಕೊಟ್ಟಿಲ್ಲ ಯಾವ
ಹೊಸ ವೈದ್ಯನೂ,ಹಳೆರೋಗಿಯೂ
ಇನ್ನೂ ಇದಕ್ಕೆ ಮದ್ದು!!!

ಸ್ಥಿರಗೊಳಿಸುವ ಆಸೆ ನಿಲ್ಲಿಸಿ
ಈಗ
ಅನುಸರಿಸುತ್ತಿರುವೆ ಮನಸ
ಎಲ್ಲಿಗಿದರ ಪಯಣ?
ಹೇಗಿದರ ಪಯಣ?
ಯಾಕಿದರ ಪಯಣ?
ಯಾರಿದರ ಒಳಗಿರುವ ಯಜಮಾನ?
ಎನ್ನುವ "ಕೆಟ್ಟ ಕುತೂಹಲ"ದೊಂದಿಗೆ.

ಹೊಸ ಉಪಾಯ ದೊರೆತರೆ
ಗೆಳೆಯಾ..
ತಿಳಿಸೆನಗೆ
ಮರೆಯದೆ..ಮಹರಾಯ....
-----------------------

Wednesday, February 24, 2010


........ಆಹುತಿ!


ನನ್ನ ಬದುಕಿನ ಬಂಡಿಯ
ಹೀಗೇಕೆ ಓಡಿಸಿದೆ?
ಹೇ ವಿಧಿಯೇ
ಕರ್ಣಕುಂಡಲ ಧರಿಸಿಯೂ
ಚಕ್ರವರ್ತಿಯ ಕರ್ಣಾಭರಣವಾಗುವ ಯೋಗ
ಮಾತ್ರವಾಯಿತೇ ಎನಗೆ?

ಹುಟ್ಟಿನಿಂದಲೇ ಅಲೆಯ ತೊಯ್ದಾಟಕ್ಕೆ
ಸಿಲುಕಿದ "ರಾಧೇಯ"ನಾಗಿ ನಾನು,
ನನ್ನ ಬದುಕಿನುದ್ದಕ್ಕೂ
ಗಟ್ಟಿಯಾಗಿ ನೆಟ್ಟಗೆ ನಿಲ್ಲಲೇ ಇಲ್ಲವಲ್ಲ!!

.......ಸುತ್ತಲೂ ಮೆತ್ತನೆಯ ರೇಶಿಮೆಯ ದುಕೂಲವಿತ್ತು
ವಜ್ರಾಭರಣಗಳಿತ್ತು ಮುಚ್ಚಿದಪೆಟ್ಟಿಗೆಯ ಒಳಗೆ
ಅದರೆ ಅಮ್ಮಾ,.....
ನದೀತಟದಲ್ಲಿ ಮರಳಿನಾಟವ ಆಡುವ ಮಕ್ಕಳಂತೆ
ಆಡಿ ನನ್ನ ಪಡೆದು
"ಭಾರತದ" ಗಂಗೆಗೆ ದೂಡಿಬಿಟ್ಟ ನಿನ್ನಲ್ಲಿರವಷ್ಟಾದರೂ
ಕರುಣೆಯಿತ್ತೇ?
ಕೇಳಿದ್ದೆ ನಾನು...
ಜಗತ್ತಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು
"ಕುಮಾತಾ ನ ಭವತಿ" ಅಂತ
ನೀನೇನಾಗಿಹೋದೆ ಕುಂತೀ
ಜಗತ್ತಿನ ಮೊತ್ತಮೊದಲ ಕೆಟ್ಟತಾಯಿ
ಎಂಬ ಬಿರುದು ಹೊತ್ತುಕೊಂಡಲ್ಲೇ ಕುಂತು ಬಿಟ್ಟೆಯಲ್ಲೇ!!!

ಸೂತಪುತ್ರ,ಅಧಿರಥನ ಮಗ,
ವಸುಷೇಣನಾದರೂ
ಪರಶುರಾಮರ ಮಾನಸಪುತ್ರನಾದರೂ
ನನ್ನ ಅಂಧಕಾರವನ್ನು ಕಳೆಯಬಲ್ಲ ವಿದ್ಯೆ
ದೊರೆಯದೇ ಹೊಯಿತೇ..

ಅಂಗರಾಜ್ಯದ ಅಧಿಪತಿ
ಆಗಿ ತಲೆಗೆ ಕಿರೀಟ ಬಂದರೂ
ಜನರ ಕಿವಿಗಳಿಗೆ ಪ್ರೀಯನಾಗಿ
"ಕರ್ಣ"ನಾದರೂ
ಕಿರೀಟಿಗೆ ಸಮನಾಗಲಿಲ್ಲವಲ್ಲ!

ಅಂಬೆ ಅಂಬಾಲಿಕೆಯರ
ಅಜ್ಜ ಭೀಷ್ಮ
ಹೊತ್ತುತಂದಂತೆ
ಆವಂತಿಯ ಚಂದ್ರಮತಿ, ಭಾನುಮತಿ,ಸುರಸೆಯರ
ಸುಯೋಧನನಿಗೆ ತಂದೊಪ್ಪಿಸಿ ರಾಜನಿಷ್ಠೆಯ ಮೆರೆದರೂ
ದೊರೆಯಮನ್ನಣೆ ದೊರೆತುದಷ್ಟೇ..ಬಿಡಿ

ಯುದ್ಧರಂಗದವರೆಗೂ ಬೆಂಬಿಡದೆ ಬಂದ ಬಿರುದು
"ಮಹಾರಥಿ"
"ದಾನಶೂರ ಕರ್ಣ" ಎನ್ನುವುದೇ ಮುಳುವಾಯಿತೇ ಎನಗೆ?

ಒಳಹೊಕ್ಕರೆ ಹೊರಬರಲರಿಯದ
ಚಕ್ರವ್ಯೂಹದಲಿ ಅಭಿಮನ್ಯುವ ತರಿದ
ಅಪವಾದ ಬಂದದ್ದು
ನಿಜವಾದರೂ.....
ನಿಜಕ್ಕಾದರೂ,,
ಆ ಚಕ್ರಿಯಲ್ಲವೇ
ಮಹಾಭಾರತದ ಅನೂಹ್ಯ
ಚಕ್ರವ್ಯೂಹವ ಹೆಣೆದದ್ದು!
ಈ ಕರ್ಣನ ಬದುಕಿಗೆ?

ಹಾ!!
ವಿಧಿಯ ವಿಡಂಬನೆಯೆ!!

ಕುರುಕುಲ ಸಂಜಾತ,ಸೂರ್ಯಪುತ್ರ...
ಪಾಂಡವರಲ್ಲಿ ಹಿರಿಯ ನೀನು
ಎಂದ ಗೊಲ್ಲನಲ್ಲವೇ ನನ್ನ ಕೊಂದದ್ದು?
ಕೆಟ್ಟತಾಯಾಗಿಯೂ,ಇದ್ದ ನಾಚಿಕೆ ಮಾನ ಮರ್ಯಾದೆಯೆಲ್ಲವ ಬಿಟ್ಟು
"ತೊಟ್ಟಂಬ ತೊಡದಿರು"ಎಂಬ ವಚನವ ಪಡೆದು,
ನೀನಲ್ಲವೇ ನನ್ನ ಕೊಂದದ್ದು?

ಹೇಳು ಹಸ್ತಿನೆಯರಸಿ,ಲೊಕಮಾತೆ!!!

ಸಾರಥಿಯ ಕೈಗೂಸಾಗಿ ಬೆಳೆದೂ
ಸಾರಥಿ ಇಲ್ಲದೆ,
ರಕ್ತ ಮಾಂಸದ ಕೆಸರಲ್ಲಿ ಹೂತು ಹೋದ
ರಥಗಾಲಿಯ ಬರಿಕೈಯಿಂದ,ಓರ್ವನೇ
(ಕವಚವ ದಾನವಿತ್ತು,)ಎತ್ತುತ್ತಿರುವಾಗ
ಯುದ್ಧ ನಿಯಮವ ಮುರಿದು
ಹೊಡಿ ಕರ್ಣನ ಎದೆಗೆ ಎಂದದ್ದು ಯಾವ ನ್ಯಾಯ ಹೇಳು?

ಕುಂತಿಯಿಂದ
ಕೃಷ್ಣನವರೇಗೆ
ಎಲ್ಲರೂ ಬಳಸಿ ಎಸೆದ
ಈ ಕರ್ಣನ ಬದುಕು
ಯಾಕೆ,ಯಾರಿಗೆ
..........ಆಹುತಿ ಹೇಳಿ...

---------------------------

Tuesday, February 9, 2010

ಬೇಕು ಕಣೆ ಇಂದು ನಿನ್ನಂಥವರೇ..
---------------------------


ಮಂಥರೆ
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?

ಹೇಳು ಮಂಥರಾ,
ಯಾಕೆ ಹೊಸೆದೆ ಈ ರೀತಿ ಬತ್ತಿ?
ಮುದ್ದಿನ ರಾಣಿಯ ಅಃತಪುರದ ಅಂತರಂಗದಲ್ಲಿ?

ನೀನು ಹಿಂಡಿದ ತೊಟ್ಟು ಹುಳಿಯಿಂದಾದ್ದದೇನು?
ಹಿಡಿಯಬೇಕಾಯಿತೇ
ರಾಮ ಕಡೆಗೊಲು
ಎತ್ತಿ ಹಿಡಿಯಲು ನಡೆನುಡಿಯ
ಮೇಲ್ಪಂಕ್ತಿ ನವನೀತ!

ಅರಿವಿತ್ತೇ ನಿನಗೆ
ಅರಿವುಗೆಟ್ಟ ಮತಿಹೀನ ಮನಸ್ಸುಗಳ
ಮಡುಹಿ
ರಾಮ
ರಾಜ್ಯವ ಕಟ್ಟುವನೆಂದು?

ಹದಿನಾಲ್ಕು ವರುಶದಲಿ
ಹಾದಿತಪ್ಪಿದ ನಾಲ್ಕು ದಿಕ್ಕಿನ ಲೊಕದಲ್ಲಿ
ರಾಮ
ಬಾಣದ ರೀತಿ
ಮಾಡುವನು ಲಕ್ಷ್ಯಬೇಧವೆಂದು?

ಹೇಳು ಮಂಥರಾ,
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?

ಕೇಕಯ ದಿಂದ ನಲಿನಲಿದು ಬಂದೆ
ಕೈಕೇಯಿಯ ಪಾದ ದಾಸಿಯಾಗಿ
ದಶರಥನ ಕಿರಿಯ ರಾಣಿಯ
ಹಿರಿಯ ದಾಸಿಯಾಗಿ.
ನಿನ್ನೊಳಗೆ ಅಂದೇ
ತುಂಬಿ ತಂದಿದ್ದಿಯೇನೇ
ಇಂಥ ಮಾತ್ಸರ್ಯದ ಮಾಯಾ ಮಡಿಕೆಯ!

ಆದರೆ ಮಂಥರಾ,
ಅಯೋಧ್ಯೆಯ ಅಗಸನಿಗೂ ನ್ಯಾಯ ಸಿಗುವ ಮೊದಲು
ನಡೆಯಿತು..ನೊಡು
ಭರತ
ಖಂಡದಲ್ಲೆಲ್ಲ
ಅನ್ಯಾಯ ಅನೀತಿಯ ಸಂಹಾರ?
ಅಹಲ್ಯೆ
ಶಬರಿ
ಯ ಉಧ್ಧಾರ!

ಮಂಥರೇ
ಬೇಕು ಕಣೆ ಇಂದು ನಿನ್ನಂಥವರೇ..

ನಮ್ಮ ಮನದ ವನವಾಸಕ್ಕೂ
ರಾವಣ ಮಾರೀಚ ಮಾಯಾಜಿಂಕೆಯ ಸಂಹಾರಕ್ಕೂ..
ಕೊನೆಗೆ ರಾಮ ರಾಜ್ಯದ ನಿರ್ಮಾಣಕ್ಕೂ..

ಮಾತ್ಸರ್ಯವೇ ಮೈಯಾದ
ಹಣ್ಣು ಹಣ್ಣು ಮುದುಕಿ..ನಿನಗೆ ಸಿಕ್ಕ
ಈ ಮರ್ಯಾದೆಯಿಂದಾಗಿಯೇ
ನನಗೆ ನಿನ್ನಲ್ಲಿ ಹೇಳಲಾಗದಷ್ಟು
ಮಾತ್ಸರ್ಯ..
ಮಂಥರಾ..
-------------