Friday, May 6, 2011




ಕನ್ನಡಿ; ಎನಗೊಂದು ಅಚ್ಚರಿ.
~~~~~~~~~~~~~~~~~~~~

ಕನ್ನಡಿ;
ಏನಚ್ಚರಿ..!

ಕನ್ನಡಿ ಗಾಜಿನಿಂದಾಗಿದೆ...ನಿಜ.
ಆದರೆ
"ಗಾಜು"ಗಳೆಲ್ಲವೂ "ಕನ್ನಡಿ"ಗಳಲ್ಲವಲ್ಲ..!

ತನ್ನೊಳಗೆ ಖಾಲಿಯಾಗಿದ್ದೂ ,
ಇರುವುದ ಇರುವಂತೆ ಪ್ರತಿಫಲಿಸುವ
ನಮ್ಮ ಅರಿವಿಗೆ ತರುವ
"ಕನ್ನಡಿ" ಸತ್ಯ !
"ಪಾರದರ್ಶಕ ಗಾಜು" ಮಿಥ್ಯವೇ ?

ಮುಟ್ಟಲಾರದ,ತಲುಪಿ,ತಟ್ಟಲಾರದ
"ಪಾರದರ್ಶಕ ಗಾಜು"
ಕೇವಲ ದರ್ಶಕ !

ಆಹಾ...
ಒಳಗಿನ ಎಲ್ಲವನ್ನೂ ಕಂಡ ದಾರ್ಶನಿಕನಿಗೂ
ಅವನ ನಿಲುವಿನ
ದರ್ಶನಕ್ಕೆ.."ದರ್ಪಣ" ವೇ ಗತಿ !

ಅರೆ ! ಏನಚ್ಚರಿ !
ದಿಕ್ಕುಗಳ ಎಡ,ಬಲ
ಅದಲು ಬದಲಾಗಿ ತೋರಿಸಿದರೂ
ಆಕಾರ ವಿಕಾರಗಳು
ಅನುಭವಕ್ಕೆ ಸಲ್ಲುವುದು,
ನಮ್ಮೆದುರು ಬಂದ"ಪಾರದರ್ಶಕ ಗಾಜು"
ಬೆನ್ನಿಗೊಂದು "ಪರೆ" ಹಚ್ಚಿಸಿಕೊಂಡು
ಅಪಾರ...ದರ್ಶಕವಾಗಿ ಆಗಿ..
ಬದಲಾಗಿ
"ದರ್ಪಣ"ವಾದಾಗ !
ಅರೆ!
ಎಷ್ಟು ಸೊಗಸಾಗಿದೆ.
***********************

Saturday, December 11, 2010



ಅಭಿನಯ ಚತುರ.
--------------
ಹೊನ್ನಿನದ್ದದಾದರೆ
ಶೂಲವೋ,ತ್ರಿಶೂಲವೋ
ಯಾವುದಕ್ಕೂ ಸೈ..

ಬಂಗಾರದ್ದಾದರೆ
ಸರಪಳಿಯೊ,ಕೈಕೋಳವೋ
ಒತ್ತಾಯಕ್ಕೆ ಬೇಕಾದರೆ
ಎರಡೂ ಇರಲಿ...

ಪತ್ರಿಕೆ,ಬಾನುಲಿ
ಟಿವಿಯ ಕವರೇಜ್
ಸರಿಯಾಗಿದ್ದರೆ,
ಪ್ರವಚನ,ಸಂದರ್ಶನ
ಲೊಕೋದ್ಧಾರವೇ ನಮ್ಮ ಗುರಿ..

ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..

ಮೋಹದ ಹೆಂಡತಿ
ಮನೆಯೊಳಗಿರಲು,
ಕಾವಿಯ ಬಣ್ಣ ಹೇಗಿದ್ದರೇನು..?
ಅಭಿನಯ ಚತುರನ
ದರ್ಭಾರಿನಲ್ಲಿ
ಪರಾಕ್..ಭೋ..ಪರಾಕ್!!
----------------

Sunday, October 24, 2010



ರೂಪಾಂತರ
-----------

ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.

ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.

ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.

ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..

ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.

ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------

Friday, October 15, 2010




ಆರು ಚಕ್ರದ ಅಂದದರಮನೆ.
-----------------------
ಮತ್ತೆ ಕರೆಯಬೇಡ ಕಣೆ,ನೀನು ಕಾಮಿನಿ,
ಕಾಮನ ಅರಗಿಣಿ,
ಕಡೆಗಣ್ಣನೋಟದಲಿ ಕೆಣಕಿ, ನನ್ನಲ್ಲಿ
ಆರುತ್ತಿರುವ ಕಿಚ್ಚನ್ನು ಕೆದಕ ಬೇಡವೇ..

ನನ್ನೆದುರಿನ ಚಿನ್ನದ ಚಿಗರೆಯಾಗಿ
ಆಸೆಯ ಉರಿಗೆ ತಿದಿಯೂದಿ
ಭಾವ ಬದಲಾಗಿ,ಕ್ರೋಧ ಹುಟ್ಟಿ
ಕೋಪದ ಕೈಗೊಂಬೆಯಾಗಿಸ ಬೇಡ ಕಣೇ..

ನಿನ್ನಪಡೆಯುವ ಹರ ಸಾಹಸದ
ವೆಚ್ಚಕ್ಕೆ ಹೊನ್ನ ಕೂಡಿಡುವ
ಲೋಭಿಯಾಗಿಸಬೇಡವೇ...ಚಿನ್ನಾ..

ಮೋಹದ ಮಾಯಾ ಮುಸುಕನ್ನು ಮುಚ್ಚಿ,
ಮರೆಸುತ್ತ ಲೋಕದ ರೀತಿನೀತಿಯ
ಚೌಕಟ್ಟಿನಿಂದಾಚೆಗೆ ಸೆಳೆಯಬೇಡವೇ..
ಮೋಹನಾಂಗೀ..

ಆಮೋದ ಪ್ರಮೋದದ
ಹಳೆನೆನಪನುದ್ದೀಪಿಸಿ,
ಮದ ತುಂಬಿ,ಉನ್ಮತ್ತನನ್ನಾಗಿಸ ಬೇಡ
ಕಣೇ..ಮದಗಜಗಾಮಿನಿ.

ನಿನ್ನೆಗಳ ಮರೆಯುವ ಪ್ರಯತ್ನಕ್ಕೆ
ಮಾತ್ಸರ್ಯದ ಸವತಿಯಾಗಿ ಕಾಡಬೇಡವೇ..
ಕನಸಿನ ಕನಕಾಂಗಿ..
ಕಾಡಿ ನೂಕದಿರು ಮತ್ತೊಮ್ಮೆ ನನ್ನ
ಜೀವನದ ಜೋಕಾಲಿಗೆ...
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ...
------------------------

Thursday, August 19, 2010

ಚಿಂತೆ
-----


ಯಾರಿಗೆ ಬೇಡ ಹೇಳಿ?

ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .

ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

ಚಿಂತೆ ಯಾರಿಗೆ ಬೇಡ?

ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,

ಚಿಂತೆ ಯಾಕೆ ಬೇಡ ಹೇಳಿ ?

ಚಿಂತೆ ಯಾಕೆ ಮಾಡತಿಯಾ ?................
ಕೇಳೋದು ಸುಲಬ!

ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !
----------
ನೀವೆಲ್ಲ
ಮತ್ತೆ ಇದನ್ನೊಮ್ಮೆ ಓದಿದರೆ ಚೆನ್ನಾಗಿತ್ತು ಅನಿಸ್ತು.ಅದಕ್ಕೇ ಪೋಸ್ಟ್ ಮಾಡಿದೆ.