Saturday, January 23, 2010


ತೃಪ್ತಿ,
ನಿನಗಾಗಿ ಹಂಬಲಿಸಿ ಕಾದಿರುವೆ
ನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?

ಹುಡುಗುತನದ ಹುಡುಗಾಟದ ಬಾಲ್ಯದಲ್ಲಿ
ಮನೆಯಂಗಳದ ಒಳಗೆ ಹೊರಗೆ
ಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದು
ನಿನ್ನನ್ನೇ ಅಲ್ಲವೇನು?

ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿ
ನನ್ನೂರು ಪರವೂರು ಹತ್ತೂರುಗಳಲ್ಲಿ
ಕತ್ತಲಿನ ಗುಹೆಗಳಲ್ಲಿ,ಗೊಂಡಾರಣ್ಯದಲ್ಲಿ
ಅದರ್ಶಗಳ,ಗಾಜಿನರಮನೆಯ ಅಂತರ್ಯದ ನೆಲಮಾಳಿಗೆ ಯೊಳಗೆ
ತಡಕಾಡಿದ್ದು ನಿನ್ನ ಬೆಚ್ಚನೆಯ ಅಪ್ಪುಗೆಯ ಬಿಸುಪಲ್ಲಿ
ಕರಗಿ ನೀನೇಆಗಬೇಕಂದಲ್ಲವೇ ಹೇಳು?

ತೃಪ್ತಿ,
ಕನಸಿನ ಕನ್ಯೆಯೋ,ಅಂಬರದ ಅಪ್ಸರೆಯೋ.
ನೀನೆಲ್ಲಿ ಹೋದೆಯೇ,ಕನ್ನಡಿಯೊಳಗಿನ ಕಿನ್ನರಿ?
ತುಂಬು ಸಂಸಾರದ,ಸಡಗರದ,ಜಾತ್ರೆಯ ನಡುವೆ
ನಿನ್ನದೊಂದು ಕಡೆಗಣ್ಣನೊಟವೂ ಇಲ್ಲದಾಯ್ತೇ ಗೆಳತಿ?
ಆಸೆ,ಮಾತ್ಸರ್ಯಗಳೆಂಬ ಸವತಿಯ ಕಾಟಕ್ಕೆ,
ದುಡ್ಡಿನ ಗುಡ್ಡವನೊಟ್ಟುವ,ಬಿರು ಬಿಸಿಲ ಕಾಯಕಕ್ಕೆ ಹೆದರಿ ಬೆದರಿ
ಮಾಯವಾದೆಯೇನೇ?

ತೃಪ್ತಿ,
ಒಡಲ ಜೀವ ಚೈತನ್ಯವೇ
ಇನ್ನಾದರೂ ಬರಲಾರೆಯಾ,ನೆಮ್ಮದಿಯ ನೆರಳಾಗಿ,
ಭಾವದ ಗೆಳತಿಯಾಗಿ,ತಂಪೆರೆವ ತಾಯಾಗಿ,ತಣ್ಣನೆಯ ತನುವಾಗಿ?

ಹೊರಟಿಹೆನು ಇಂದು,ಹೊಗದೂರಿಗೆ ಒಂಟಿಯಾಗಿ...
ಅರೆ!
"ಒಬ್ಬಂಟಿಯಲ್ಲವೋ ಮೂಢ ನಾನಿರುವೆ ನಿನ್ನೊಳಗೆ,
ನಿನ್ನೆದೆಯ ಒಳಗೇ"

ತೃಪ್ತಿ,
ಹೊರಗೆ ಊರೆಲ್ಲ,ಅವರಿವರ ಬಳಿಯೆಲ್ಲ,ನೀನಿರುವೆಯೋ ಎಂದು
ಅರಸಿದ್ದು ಹುಸಿಯಾಯಿತೇ?...
ಅರಿವಾಯಿತೇ ಇಂದು!

ನಿನ್ನಿರವು ನನ್ನರಿವಾಗಿ,ಬಲವಾಗಿ ಹೆಪ್ಪುಗಟ್ಟುತ್ತಿದ್ದರೆ,ಹಾರಾಡಬಹುದಿತ್ತಲ್ಲವೇ
ಅನಂತ ಆಕಾಶದಲಿ ಜೋಡಿ ಹಕ್ಕಿಯಾಗಿ!?

ಇರಲಿ ಬಿಡು.ಈಗಲಾದರೂ ಬಂದೆಯಲ್ಲ,ಅಲ್ಲ
ಅರಿತೆನಲ್ಲ..ತೃಪ್ತಿ
ನೀನಿರುವೆ ಜೊತೆಯಾಗಿ,ಆನಂದ ಪಯಣದಲಿ
ಜೊತೆಗಾತಿಯಾಗಿ..
-----------------

16 comments:

Ganesh Bhat said...

ಭಾವನೆಗಳ ಉತ್ತುಂಗದಿಯಲಿ
ಪರಿಮಳವ ತುಂಬಲು ಹೊರಟರೆ
ಪದಗಳೇ ಸಾಲದು.....ಇದು ನಿಜ
ಚೆಂದದ ಕವನ......
ಸೊಗಸಾಗಿದೆ...

Subrahmanya said...

ಸೊಗಸಾದ ಭಾವಪೂರ್ಣ ಕವನ....

Nisha said...

Chennagide

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗಣೇಶ್,ಸಬ್ರ್ಮಮಣ್ಯರೇ.ವಂದನೆಗಳು.
ನಿಶಾ,ಧನ್ಯವಾದಗಳು.

ಗೌತಮ್ ಹೆಗಡೆ said...

ishtavaaytu:)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗೌತಮ್..ಧನ್ಯವಾದಗಳು..

Unknown said...

ವಾಹ್, ತೃಪ್ತಿಯ ಕಡೆಗಣ್ಣ ನೋಟದ ಸ್ನಿಗ್ದ ಸೌಂದರ್ಯ ಮತ್ತದರ ಸಾಮಿಪ್ಯ ನಮಗೂ ಅರಿವಿಗೆ ಬಂತು ಸರ್ ಈ ಕವಿತೆ ಓದಿ. ನೀವೇ ಹೇಳಿದಂತೆ ಭಾವದ ಗೆಳತಿಯಾಗಿ, ತಂಪೆರೆವ ತಾಯಾಗಿ, ತಣ್ಣನೆಯ ತನುವಾಗಿ ಅಚ್ಚರಿಗಳ ಅರಿವಿನ ಆಚೆ ಈಚೆಯ ಹುಡುಕಾಟವಾಗಿ ಓದುಗರನ್ನೂ ಕಾಡುತ್ತಾಳೆ, ಕಾಯುತ್ತಾಳೆ ತೃಪ್ತಿ..

ಸಾಗರದಾಚೆಯ ಇಂಚರ said...

ನಿಜಕ್ಕೂ ಚನಡದ ಕವನ
ತ್ರಪ್ತಿಯ ಬಗೆಗಿನ ಕವನ ಓದಿಸಿಕೊಂಡು ಹೋಗುತ್ತದೆ

Shashi jois said...

ತೃಪ್ತಿಯನ್ನು ಓದಿ ತೃಪ್ತಳಾದೆ..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸಾಗರದಾಚೆಯ ಇಂಚರ ದ ಕಾವ್ಯ ದಲ್ಲಿ ಶಶಿ ಗೆ ತೃಪ್ತಿ
ಸಿಕ್ಕಿದ್ದು ಖುಶಿಯಾಯಿತು.

ಸುನೀಲ್ ಕುಲಕರ್ಣಿ, ಮಂಗಳೂರು said...
This comment has been removed by the author.
ಸುನೀಲ್ ಕುಲಕರ್ಣಿ, ಮಂಗಳೂರು said...

chennagide. uttama kavana

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುನೀಲ್..ವಂದನೆಗಳು.ಅಗಾಗ ಬರುತ್ತಿರಿ.
ಈ ಬ್ಲಾಗ್ ನ ಉಳಿದ ಬರಹಗಳನ್ನೂ ಓದಿ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಒಳಗಿನ ಹುಡುಕಾಟ ಹೆಚ್ಚಿನ ತ್ರುಪ್ತಿಯನ್ನು ಕೊಟ್ಟರೆ,ಅರಿವಿನ ಹುಡುಕಾಟ ತ್ರುಪ್ತಿಯನ್ನು ಹುಡುಕುತ್ತದೆ.ತ್ರುಪ್ತಿಯನ್ನು ಕ೦ಡುಕೊ೦ಡ ಪರಿ ಚೆನ್ನಾಗಿದೆ.ಕವನದ ಓಘ ಮೆಚ್ಚುವ೦ತಹದು.ಶಬ್ದಗಳ ಬ೦ಧ ನೆನಪಿನಲ್ಲುಳಿಯುತ್ತದೆ.
lovely sir!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಧನ್ಯವಾದಗಳು ಸಾರ್..

ಓ ಮನಸೇ, ನೀನೇಕೆ ಹೀಗೆ...? said...

ಭಾವಪೂರ್ಣ ಕವನ ಸರ್..ತುಂಬಾ ಇಷ್ಟವಾಯ್ತು .

Post a Comment